ಅಕಾಲದಲ್ಲಿ ಅಸ್ತಂಗತ ಇಳಲಿ ಸದಾಶಿವ ಹೆಗ್ಡೆ
ಲೇಖಕರು : ನಾರಾಯಣ ಎಂ. ಹೆಗಡೆ
ಮ೦ಗಳವಾರ, ಜುಲೈ 21 , 2015
|
ಜುಲೈ 10ರಂದು ಅಕಾಲಿಕವಾಗಿ ನಮ್ಮನ್ನಗಲಿದ ಸದಾಶಿವ ಹೆಗ್ಡೆ ಯಕ್ಷಗಾನದ ಅಭಿಜಾತ ಕಲಾವಿದ. ಚುರುಕಿನ ಕುಣಿತ, ಭಾವಪೂರ್ಣ ಅಭಿನಯ, ಹದವರಿತ ಮಾತುಗಾರಿಕೆಯಿಂದ ಯಕ್ಷಲೋಕದಲ್ಲಿ ತಮ್ಮನ್ನು ಸ್ಥಾಪಿಸಿಕೊಂಡ ಹೆಗ್ಡೆಯವರು ಮೇಳಕ್ಕೆ ಬೇಕಾದ ಕಲಾವಿದರಾಗಿದ್ದರು.
ಪರಿಸರದ ಕಲೆ ಯಕ್ಷಗಾನ ಎಳವೆಯಲ್ಲೇ ಇವರನ್ನು ತನ್ನತ್ತ ಆಕರ್ಷಿಸಿತು. 8ನೇ ತರಗತಿಗೆ ವಿದ್ಯಾಭ್ಯಾಸವನ್ನು ನಿಲ್ಲಿಸಿ ತಮ್ಮ 15ರ ಹರೆಯದಲ್ಲೇ ಯಕ್ಷಗಾನ ಪ್ರವೇಶಿಸಿದರು. ಶ್ರೀನಿವಾಸ ಹೆಗ್ಡೆ - ಇಂದಿರಾ ಹೆಗ್ಡೆ ದಂಪತಿಯ ಸುಪುತ್ರರಾದ ಸದಾಶಿವ ಹೆಗ್ಡೆ ಆರೊಡು ಗೋವಿಂದರಾಯ ಶೆಣೈ ಅವರಲ್ಲಿ ಯಕ್ಷಗಾನ ಅಭ್ಯಾಸ ಮಾಡಿದರು.
48ರ ಹರೆಯದಲ್ಲಿ ವಿಧಿಯ ಕ್ರೂರದೃಷ್ಟಿಗೆ ಬಲಿಯಾದ ಇವರು ಪೆರ್ಡೂರು, ಸೌಕೂರು, ಕಮಲಶಿಲೆ, ಅಮೃತೇಶ್ವರಿ, ಕಳವಾಡಿ, ಮಂದಾರ್ತಿ, ಬಗ್ವಾಡಿ, ಹಾಲಾಡಿ, ಸಿಗಂಧೂರು, ಮಡಾಮಕ್ಕಿ ಮೇಳಗಳಲ್ಲಿ 23 ವರ್ಷ ಕಲಾಸೇವೆಗೈದಿದ್ದಾರೆ. ಹದವಾದ ಆಳಂಗ ಮತ್ತು ಚುರುಕಿನ ಹೆಜ್ಜೆಗಾರಿಕೆಯಿಂದ ಪುಂಡುವೇಷಗಳಲ್ಲಿ ಮಿಂಚಿದ ಇವರು ಅಭಿಮನ್ಯು, ಬಬ್ರುವಾಹನ, ವೃಷಸೇನ, ಧರ್ಮಾಂಗದ ಮೊದಲಾದ ಪಾತ್ರಗಳಿಗೆ ವಿಶೇಷ ಮೆರುಗು ನೀಡಿದವರು. ಯಕ್ಷಗಾನಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ಸದಾಶಿವ ಹೆಗ್ಡೆ ಪೌರಾಣಿಕ ಪ್ರಸಂಗಗಳ ನಡೆ ಮತ್ತು ಪ್ರಸಂಗ ಸಾಹಿತ್ಯಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು.
ಯಾವುದೇ ಪೌರಾಣಿಕ ಪ್ರಸಂಗದ ಪ್ರದರ್ಶನ ವಿರಲಿ, ಮೇಳದ ಯುವ ಕಲಾವಿದರಿಗೆ ಮಾರ್ಗದರ್ಶನ ಮಾಡಿ ಇಡೀ ಆಟಕ್ಕೆ ಉಠಾವ್ ಒದಗಿಸುವ ಶ್ರದ್ಧಾವಂತ ಕಲಾವಿದರು. ಜೋಡಾಟದಲ್ಲಂತೂ ತಮ್ಮ ಮಂಡಿ ಮತ್ತು ಕುಣಿತಗಳಿಂದ ಆಟಕ್ಕೆ ಉಠಾವು ನೀಡಬಲ್ಲ ಕಲಾವಿದ. ಮಾತುಗಾರಿಕೆಯಲ್ಲಿ ಅವರ ಭಾಷಾ ಪ್ರೌಢಿಮೆ, ಪುರಾಣ ಜ್ಞಾನ ಸ್ಪಷ್ಟವಾಗಿ ಅಭಿವ್ಯಕ್ತವಾಗುತ್ತಿತ್ತು. ಸಹಕಲಾವಿದರೊಂದಿಗೆ, ಯಜಮಾನರೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿದ್ದ ಸದಾಶಿವ ಹೆಗ್ಡೆ ಎಲ್ಲರ ಪ್ರೀತಿಪಾತ್ರಕ್ಕೆ ಭಾಜನರಾಗಿದ್ದರು. ಉತ್ಸಾಹದಿಂದ ಯಕ್ಷರಂಗದಲ್ಲಿ ವಿಜೃಂಭಿಸುತ್ತಿದ್ದ ಇಳಲಿಯವರು ಇದ್ದಕ್ಕಿದ್ದಂತೆ ಬದುಕಿನ ರಂಗದಿಂದ ನಿರ್ಗಮಿಸಿದ್ದು ಯಕ್ಷರಂಗಕ್ಕೆ ದೊಡ್ಡ ದೊಡ್ಡ ನಷ್ಟ ಎಂಬುದು ಕ್ಲೀಷೆಯ ಮಾತಲ್ಲ.
****************
ಕೃಪೆ :
udayavani
|
|
|